ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ
ಯಾವುದಕು ಹೋಲಿಸಲು ಸಾಟಿಯಲ್ಲ || ಪ ||

ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ
ಬಸವಣ್ಣನೆಂಬ ರೂಪವ ತಳೆಯಿತು
ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ
ಬಸವ ನಿನ್ನಯ ದ್ವನಿಯು ತಾ ಮೊಳಗಿತು ||ಅ.ಪ.||

ಬಸವನೆಂದರೆ ಬೆಳಕು ಬರಿಯ ಮಿಣುಬೆಳಕಲ್ಲ
ಕಣ್ಣು ಕೋರೈಸುವ ಮಿಂಚು ವಿದ್ಯುತ್ತು
ಹಿಂದೆ ಶತಮಾನಗಳ ಕತ್ತಲೆಯು ಕಳೆದಿತ್ತು
ಮುಂದೆ ಶತಮಾನಗಳ ತೊಳಗಿ ಬೆಳಗಿತ್ತು || ೧ ||

ಆ ಬೆಳಕಿನಲ್ಲಿ ಹೊಸ ಧರ್ಮವೆ ಉದಿಸಿತ್ತು
ಕಿರಿಯ ಮತ ಧರ್ಮಗಳು ಮರೆಯಾದವು
ಆ ಬೆಳಕಿನಲ್ಲಿಯೇ ಕವಿಯಾಗಿ ಶರಣ ಗಣ
ಹೊಸದು ಮನ್ವಂತರದ ಸಿರಿಯಾದವು || ೨ ||

ಬಸವನೆಂದರೆ ಬಳ್ಳಿ ಹಬ್ಬಿತ್ತು ನಾಡೆಲ್ಲ
ಕರುನಾಡ ತೋಟದಲಿ ತಾನೆ ತಾನು
ಕಳೆ ಕಸುವು ನಶಿಸಿದವು ಹೊಸ ಹೂವು ಅರಳಿದವು
ಸಿರಿಕಂಪು ಮಾಧುರ್ಯ ಎಂಥ ಜೇನು || ೩ ||

ಜಾನಪದ ಸೋಗಡನ್ನು ಮಣ್ಣಿನೊಳ ಕಸುವನ್ನು
ಹೀರಿ ಜನಮನವನದಿ ವ್ಯಾಪಿಸಿತ್ತು
ನಡೆನುಡಿಯ ಬಳಸಿತ್ತು ತಿದ್ದಿತ್ತು ಬೆಳೆಸಿತ್ತು
ತನಿಹಣ್ಣು ರಸವಾಗಿ ರೂಪಿಸಿತ್ತು || ೪ ||

ಬಸವನೆಂದರೆ ಹೊಳೆಯು ಬರಿಯ ಕಿರು ಹೊಳೆಯಲ್ಲ
ಭೋರ್ಗರೆವ ಮಹಾಲಿಂಗ ಭಾವಧಾರೆ
ಕೂಡಿದ್ದ ಗತಕಾಲ ಕಶ್ಮಲವ ಕೊಚ್ಚುತ್ತ
ತಿಳಿವು ತಿಳಿ ಹೊನಲಾಗಿ ಜೀವಧಾರೆ || ೫ ||

ಬರಡಾದ ಮಾನವತೆ ತಂಪು ಜಲವನು ಹೀರಿ
ಚಿಗುರೊಡೆದು ಆನಂದ ಪಲ್ಲವಿಸಿತು
ತಿಳಿಜಲದಿ ಮಿಂದು ಪರಿಶುದ್ಧ ಜೀವದ ರಾಶಿ
ಹಾಡು ಎದೆಯೊಳಗಿಂದ ಹೊಮ್ಮಿಸಿತು || ೬ ||

ಬಸವನೆಂದರೆ ಬೆಂಕಿ ಪಾಪಗಳನುರಿಸಿತ್ತು
ಜಾತಿ ಮತ ಭೇದಗಳ ಸುಟ್ಟು ಹಾಕಿ
ಮೌಢ್ಯ ಹುಸಿಗಳು ಬೂದಿ ಅಜ್ಞಾನ ನಶಿಸಿತ್ತು
ದುಷ್ಟ ದೌರ್ಜನ್ಯಗಳ ಮಟ್ಟ ಹಾಕಿ || ೭ ||

ವಿಷಮತೆಯ ಅವಲೋಹ ಸುಟ್ಟುರಿದು ಕರಕಾಗಿ
ಚೊಕ್ಕ ಚಿನ್ನದ ಸಮತೆ ನೆಲೆಗೊಂಡಿತು
ದೌರ್ಬಲ್ಯ ಹೇಡಿತನ ಆಲಸ್ಯ ಸಣ್ಣತನ
ಕೆಟ್ಟ ಹುಳುಗಳ ಬಳಗ ಕೆಟ್ಟೋಡಿತು || ೮ ||

ಬಸವನೆಂದರೆ ಬಯಲು ಕೊನೆಯಿಲ್ಲದಾಕಾಶ
ಮಾನವನ ಉತ್ತುಂಗ ಸಿದ್ದಿ ಕಳಶ |
ಭುವಿ ಬಾನುಗಳನೊಂದು ಮಾಡುತ್ತ ನಿಂತಂಥ
ಪಾರಮಾರ್ಥದ ಗುರಿಯು ತುರೀಯಾಶ || ೯ ||

ಕಾಯಕ್ಕೆ ಮಿತಿಯುಂಟು ಜೀವಕ್ಕೆ ಗತಿಯುಂಟು
ವಿಶ್ವವ್ಯಾಪೀ ಭಾವ ಬಯಲ ಬೆರಗು
ತಿಳಿದಂತೆ ಹೊಳೆ ಹೊಳೆದು ಅರಿವನ್ನು ಬೆಳೆಸುವುದು
ತಿಳಿಯುವುದು ಇನ್ನು ಇನ್ನೂ ಉಳಿವ ಕೊರಗು || ೧೦ ||

ಬಸವನೆಂದರೆ ಕಡಲು ಕರುಣೆ ಶಾಂತಿಯ ಒಡಲು
ಶರಣಗಣ ನದಿಗಳಿಗೆ ಗಮ್ಯ ತಾಣ
ಅಸಹಾಯ ನಿರ್ಗತಿಕ ನೊಂದ ಜೀವರಿಗೆಲ್ಲ
ಸಾಂತ್ವನದ ಅಭಿಮಾನ ಸೆಲೆ ಪೂರಣ || ೧೧ ||

ಬಸವನೆಂದರೆ ಪ್ರೀತಿ ಜಗದಗಲ ತಟ್ಟುವುದು
ಲೇಸು ದಾರಿಯು ಮಾತ್ರ ಅಚ್ಚುಮೆಚ್ಚು
ಬಸವನೆಂದರೆ ಕತ್ತಿ ಕೆಟ್ಟುದನು ಕೊಚ್ಚುವುದು
ವಜ್ರದಂತೆಯ ಕಠಿಣ ಅದರ ಕೆಚ್ಚು || ೧೨ ||

ಬಸವನೆಂದರೆ ಬೆಳಗು ಅರುಣೋದಯದ ಕಾಂತಿ
ನವ ಸಮಾಜವು ಕಣ್ಣು ತೆರೆಯಲಿಕ್ಕೆ
ಗಾಢ ನಿದ್ದಯನೊದ್ದು ಜನಮನವು ತಿಳಿದೇಳೆ
ಅಜ್ಞಾದಂಧತಮ ಹರಿಯಲಿಕ್ಕೆ || ೧೩ ||

ಬಸವನೆಂದರೆ ಚಂಡಮಾರುತವು ಕಸರಜಕೆ
ಜೊಳ್ಳನೆಲ್ಲವ ತೂರಿ ಶುಚಿ ಮಾಡಲು
ಬಸವನೆಂದರೆ ಮಂದ ಮಾರುತವು ದಣಿದವಗೆ
ನೊಂದ ಬೆಂದವರನ್ನು ಸಂತವಿಡಲು || ೧೪ ||

ಬಸವನೆಂದರೆ ಮಂತ್ರ ದಂಡವದು ಸಾಧನೆಗೆ
ಕಲ್ಪತರು ಅರ್ಥಿಯಿಂ ಬೇಡುವರಿಗೆ
ಬಸವ ನಂದಾದೀಪ ಎಂಥ ಬಿರುಗಾಳಿಯಲು
ನಸುನಗೆಯ ಹೊಂಬೆಳಕ ಕಾಂಬವರಿಗೆ || ೧೫ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಸಿಯಾ
Next post ಅಂತರ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys